ನಂದಿನಿ ಸತ್ಪತಿ (೯ ಜೂನ್ ೧೯೩೧ – ೪ ಆಗಸ್ಟ್ ೨೦೦೬) ಒಬ್ಬ ಭಾರತೀಯ ರಾಜಕಾರಣಿ ಮತ್ತು ಲೇಖಕಿ. ಅವರು ಜೂನ್ ೧೯೭೨ ರಿಂದ ಡಿಸೆಂಬರ್ ೧೯೭೬ ರವರೆಗೆ ಒಡಿಶಾದ ಮುಖ್ಯಮಂತ್ರಿಯಾಗಿದ್ದರು. == ಆರಂಭಿಕ ಜೀವನ == ನಂದಿನಿ ಸತ್ಪತಿ ನೀ ಪಾಣಿಗ್ರಾಹಿ ೯ ಜೂನ್ ೧೯೩೧ ರಂದು ಕರಾವಳಿ ಪುರಿಯ ಬ್ರಾಹ್ಮಣ ಕುಟುಂಬದಲ್ಲಿ, ಕಾಳಿಂದಿ ಚರಣ್ ಪಾಣಿಗ್ರಾಹಿ ಮತ್ತು ರತ್ನಮಣಿ ಪಾಣಿಗ್ರಾಹಿ ದಂಪತಿಗೆ ಜನಿಸಿದರು. ನಂತರ ಭಾರತದ ಕಟಕ್‌ನ ಪಿತಾಪುರದಲ್ಲಿ ಬೆಳೆದರು. ಸತ್ಪತಿಯ ಚಿಕ್ಕಪ್ಪ ಭಗವತಿ ಚರಣ್ ಪಾಣಿಗ್ರಾಹಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ ಒಡಿಶಾ ಶಾಖೆಯನ್ನು ಸ್ಥಾಪಿಸಿದರು. ಅವರು ನೇತಾಜಿ ಎಸ್‌ಸಿ ಬೋಸ್ ಅವರ ನಿಕಟ ಸಹವರ್ತಿಯಾಗಿದ್ದರು. == ರಾಜಕೀಯ ವೃತ್ತಿಜೀವನ == ೧೯೩೯ ರಲ್ಲಿ, ತಮ್ಮ ಎಂಟನೇ ವಯಸ್ಸಿನಲ್ಲಿ, ಯೂನಿಯನ್ ಜ್ಯಾಕ್ ಅನ್ನು ಕೆಳಕ್ಕೆ ಎಳೆದಿದ್ದಕ್ಕಾಗಿ ಮತ್ತು ಕಟಕ್‌ನ ಗೋಡೆಗಳ ಮೇಲೆ ಕೈ ಬರಹದಲ್ಲಿ ಬರೆದಿದ್ದ ಬ್ರಿಟಿಷ್ ವಿರೋಧಿ ಪೋಸ್ಟರ್‌ಗಳನ್ನು ಅಂಟಿಸಿದ್ದಕ್ಕಾಗಿ ಆಕೆಯನ್ನು ಬ್ರಿಟಿಷ್ ಪೊಲೀಸರು ನಿರ್ದಯವಾಗಿ ಥಳಿಸಿದರು. ಅದೇ ಸಮಯದಲ್ಲಿ ಆ ವಿಷಯವು ವ್ಯಾಪಕವಾಗಿ ಚರ್ಚಿಸಲ್ಪಟ್ಟಿತು ಮತ್ತು ಇದು ಬ್ರಿಟಿಷ್ ರಾಜ್ ನಿಂದ ಸ್ವಾತಂತ್ರ್ಯದ ಹೋರಾಟಕ್ಕೆ ಉರಿಯುವ ಬೆಂಕಿಗೆ ತುಪ್ಪವನ್ನು ಸುರಿಯುವಂತೆ ಮಾಡಿತು. ಒಡಿಯಾದಲ್ಲಿನ ರಾವೆನ್‌ಶಾ ಕಾಲೇಜಿನಲ್ಲಿ ಮಾಸ್ಟರ್ ಆಫ್ ಆರ್ಟ್ಸ್ ಓದುತ್ತಿದ್ದಾಗ, ಅವರು ಕಮ್ಯುನಿಸ್ಟ್ ಪಕ್ಷದ ವಿದ್ಯಾರ್ಥಿ ವಿಭಾಗವಾದ ಸ್ಟೂಡೆಂಟ್ ಫೆಡರೇಶನ್‌ನೊಂದಿಗೆ ತೊಡಗಿಸಿಕೊಂಡರು. ೧೯೫೧ ರಲ್ಲಿ, ಏರುತ್ತಿರುವ ಕಾಲೇಜು ಶಿಕ್ಷಣದ ವೆಚ್ಚಗಳ ವಿರುದ್ಧ ಒಡಿಶಾದಲ್ಲಿ ವಿದ್ಯಾರ್ಥಿಗಳ ಪ್ರತಿಭಟನಾ ಚಳುವಳಿ ಪ್ರಾರಂಭವಾಯಿತು, ನಂತರ ಅದು ರಾಷ್ಟ್ರೀಯ ಯುವ ಚಳುವಳಿಯಾಗಿ ಬದಲಾಯಿತು. ನಂದಿನಿ ಈ ಚಳವಳಿಯ ನಾಯಕಿಯಾಗಿ ಇದರ ನೇತೃತ್ವವನ್ನು ವಹಿಸಿಕೊಂಡಿದ್ದರು. ಪ್ರತಿಭಟನಾಕಾರರ ಮೇಲೆ ಪೊಲೀಸರು ದಾಳಿ ನಡೆಸಿದ್ದಾಗ ನಂದಿನಿ ಸತ್ಪತಿ ಅವರು ಗಾಯಗೊಂಡಿದ್ದರು. ಅವರು ಅನೇಕರೊಂದಿಗೆ ಜೈಲು ಪಾಲಾದರು. ಜೈಲಿನಲ್ಲಿ ಅವರು ದೇವೇಂದ್ರ ಸತ್ಪತಿಯನ್ನು ಭೇಟಿಯಾದರು. ಇವರು ಸಹ ಸ್ಟೂಡೆಂಟ್ ಫೆಡರೇಶನ್ ನ ಸದಸ್ಯರಾಗಿದ್ದರು ಹಾಗೂ ತದನಂತರದಲ್ಲಿ ಇವರನ್ನೇ ಮದುವೆಯಾದರು. ೧೯೬೨ ರಲ್ಲಿ, ಒರಿಸ್ಸಾದಲ್ಲಿ ಕಾಂಗ್ರೆಸ್ ಪಕ್ಷವು ಪ್ರಬಲವಾಗಿತ್ತು. ೧೪೦ ಸದಸ್ಯರನ್ನು ಹೊಂದಿರುವ ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷವು ೮೦ ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿತ್ತು. ರಾಷ್ಟ್ರೀಯ ಮಟ್ಟದಲ್ಲಿ, ಭಾರತೀಯ ಸಂಸತ್ತಿನಲ್ಲಿ ಹೆಚ್ಚಿನ ಮಹಿಳಾ ಪ್ರತಿನಿಧಿಗಳನ್ನು ಹೊಂದಲು ಚಳುವಳಿ ನಡೆಯಿತು. ಅಸೆಂಬ್ಲಿಯು ನಂದಿನಿ ಸತ್ಪತಿಯನ್ನು (ಆಗಿನ ಮಹಿಳಾ ವೇದಿಕೆಯ ಅಧ್ಯಕ್ಷೆ) ಭಾರತದ ಸಂಸತ್ತಿನ ಮೇಲ್ಮನೆಗೆ ಆಯ್ಕೆ ಮಾಡಿದರು, ಅಲ್ಲಿ ಅವರು ಎರಡು ಅವಧಿಗೆ ಸೇವೆ ಸಲ್ಲಿಸಿದರು. ೧೯೬೬ರಲ್ಲಿ ಇಂದಿರಾ ಗಾಂಧಿಯವರು ಭಾರತದ ಪ್ರಧಾನ ಮಂತ್ರಿಯಾದ ನಂತರ, ಸತ್ಪತಿ ಅವರು ಪ್ರಧಾನ ಮಂತ್ರಿಯ ಆಪ್ತ ವಲಯದಲ್ಲಿ ಮಂತ್ರಿಯಾದರು. ಅವರ ನಿರ್ದಿಷ್ಟ ಖಾತೆಯ ಹೆಸರು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಎಂದಾಗಿದೆ . ಬಿಜು ಪಟ್ನಾಯಕ್ ಮತ್ತು ಇತರರು ಕಾಂಗ್ರೆಸ್ ಪಕ್ಷದಿಂದ ನಿರ್ಗಮಿಸಿದ ಕಾರಣ ೧೯೭೨ ರಲ್ಲಿ ಸತ್ಪತಿ ಒಡಿಶಾಗೆ ಮರಳಿದರು ಮತ್ತು ಒಡಿಶಾದ ಮುಖ್ಯಮಂತ್ರಿಯಾದರು . ತುರ್ತು ಪರಿಸ್ಥಿತಿಯ ಸಮಯದಲ್ಲಿ ೨೫ ಜೂನ್ ೧೯೭೫ - ೨೧ ಮಾರ್ಚ್ ೧೯೭೭, ಅವರು ನಬಕ್ರುಸ್ನಾ ಚೌಧರಿ ಮತ್ತು ರಮಾ ದೇವಿ ಸೇರಿದಂತೆ ಹಲವಾರು ಗಮನಾರ್ಹ ವ್ಯಕ್ತಿಗಳನ್ನು ಬಂಧಿಸಿದರು. ಆದಾಗ್ಯೂ, ತುರ್ತುಪರಿಸ್ಥಿತಿಯ ಸಮಯದಲ್ಲಿ ಒಡಿಶಾ ಅತ್ಯಂತ ಕಡಿಮೆ ಪ್ರಮುಖ ವ್ಯಕ್ತಿಗಳನ್ನು ಜೈಲಿಗೆ ಹಾಕಿತ್ತು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸತ್ಪತಿ ಇಂದಿರಾ ಗಾಂಧಿಯವರ ನೀತಿಗಳನ್ನು ವಿರೋಧಿಸಲು ಪ್ರಯತ್ನಿಸಿದರು. ಸತ್ಪತಿ ಡಿಸೆಂಬರ್ ೧೯೭೬ ರಲ್ಲಿ ಅಧಿಕಾರವನ್ನು ತೊರೆದರು. ೧೯೭೭ ರ ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ, ಅವರು ಜಗಜೀವನ್ ರಾಮ್ ನೇತೃತ್ವದ ಪ್ರತಿಭಟನಾಕಾರರ ಗುಂಪಿನ ಭಾಗವಾಗಿದ್ದರು. ಅದು ಕಾಂಗ್ರೆಸ್ ಫಾರ್ ಡೆಮಾಕ್ರಸಿ (ಸಿ ಎಫ್ ಡಿ) ಪಕ್ಷವಾಯಿತು. ಮೇ ೧೯೭೭ ರಲ್ಲಿ ಸಿ ಎಫ್ ಡಿ ಜನತಾ ಪಕ್ಷದೊಂದಿಗೆ ವಿಲೀನಗೊಂಡಿತು. ನಂದಿನಿ ಸತ್ಪತಿ ಅವರು ಜೂನ್ ೧೯೭೭ ರಲ್ಲಿ ಧೆಂಕನಲ್ ನಿಂದ ಒರಿಸ್ಸಾ ವಿಧಾನ ಸಭೆಗೆ ಆಯ್ಕೆಯಾದರು. ೧೯೮೦ ರಲ್ಲಿ, ಅವರು ಆ ಸ್ಥಾನವನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿ ಮತ್ತು ೧೯೮೫ ರಲ್ಲಿ ಸ್ವತಂತ್ರವಾಗಿ ಗೆದ್ದರು. ೧೯೯೦ ರಲ್ಲಿ ಅವರ ಮಗ ತಥಾಗತ ಸತ್ಪತಿ ಜನತಾ ದಳದ ಅಭ್ಯರ್ಥಿಯಾಗಿ ಧೆಂಕನಾಲ್ ವಿಧಾನಸಭಾ ಕ್ಷೇತ್ರದಿಂದ ಗೆದ್ದರು. ರಾಜೀವ್ ಗಾಂಧಿಯವರ ಕೋರಿಕೆಯ ಮೇರೆಗೆ ೧೯೮೯ರಲ್ಲಿ ನಂದಿನಿ ಸತ್ಪತಿ ಕಾಂಗ್ರೆಸ್ ಪಕ್ಷಕ್ಕೆ ಮರಳಿದರು. ಒಡಿಶಾದಲ್ಲಿ ಕಾಂಗ್ರೆಸ್ ಪಕ್ಷವು ಅದರ ಎರಡು ಅವಧಿಯ ಆಡಳಿತ ವೈಫಲ್ಯದ ಪರಿಣಾಮವಾಗಿ (ಪ್ರಾಥಮಿಕವಾಗಿ ಜಾನಕಿ ಬಲ್ಲಭ್ ಪಟ್ನಾಯಕ್ ಮುಖ್ಯಮಂತ್ರಿಯಾಗಿದ್ದಾಗ ) ಜನಪ್ರಿಯವಾಗಲಿಲ್ಲ. ಅವರು ಗೊಂಡಿಯಾ, ಧೆಂಕನಾಲ್ ನಿಂದ ರಾಜ್ಯ ವಿಧಾನಸಭೆಯ ಸದಸ್ಯರಾಗಿ ಆಯ್ಕೆಯಾದರು ಮತ್ತು ಅವರು ರಾಜಕೀಯದಿಂದ ನಿವೃತ್ತರಾಗಲು ನಿರ್ಧರಿಸುವ ಕೊನೆಯ ಹಂತದವರೆಗೂ(೨೦೦೦ ಇಸವಿಯವರೆಗೂ) ಅಸೆಂಬ್ಲಿಯಲ್ಲಿಯೇ ಇದ್ದರು. ಅವರು ೨೦೦೦ರ ಚುನಾವಣೆಯಲ್ಲಿ ಸ್ಪರ್ಧಿಸಲಿಲ್ಲ. ಅವರು ಪ್ರಭಾವಿಯಾಗಿರಲಿಲ್ಲ ಮತ್ತು ಕಾಂಗ್ರೆಸ್ ಪಕ್ಷದ ಒಡಿಶಾ ಶಾಖೆಯನ್ನು ಟೀಕಿಸುತ್ತಿದ್ದರು. === ಕೋರ್ಟ್ ಕೇಸ್ === ೧೯೭೭ರಲ್ಲಿ, ಸತ್ಪತಿಯ ಮೇಲೆ ಭ್ರಷ್ಟಾಚಾರದ ಆರೋಪ ಹೊರಿಸಲಾಯಿತು ಮತ್ತು ಆ ಸಮಯದಲ್ಲಿ ಜಾರಿಯಲ್ಲಿದ್ದ ಭ್ರಷ್ಟಾಚಾರ ತಡೆ ಕಾಯ್ದೆಯ ಸಂಭವನೀಯ ಉಲ್ಲಂಘನೆಗಳ ಬಗ್ಗೆ ಪೊಲೀಸ್ ತನಿಖೆಯನ್ನು ಪ್ರಾರಂಭಿಸಲಾಯಿತು. ತನಿಖೆಯ ಸಮಯದಲ್ಲಿ, ಅವರಿಗೆ ಲಿಖಿತ ರೂಪದಲ್ಲಿ ಹಲವಾರು ಪ್ರಶ್ನೆಗಳ ಮೇಲೆ ವಿಚಾರಣೆ ನಡೆಸಲಾಯಿತು. ಅವರು ಯಾವುದೇ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದರು. ಭಾರತೀಯ ಸಂವಿಧಾನದ ೨೦ (೩) ನೇ ವಿಧಿಯು ಬಲವಂತದ ಸ್ವಯಂ ದೋಷಾರೋಪಣೆಯಿಂದ ಅವರನ್ನು ರಕ್ಷಿಸುತ್ತದೆ ಎಂದು ಆಕೆಯ ವಕೀಲರು ವಾದಿಸಿದರು. "ವಕೀಲರ ಹಕ್ಕು ಮತ್ತು ಸ್ವಯಂ ದೋಷಾರೋಪಣೆಯ ವಿರುದ್ಧದ ಹಕ್ಕನ್ನು ಗುರುತಿಸುವುದರೊಂದಿಗೆ ಆರೋಪಿಯ ಹಕ್ಕುಗಳನ್ನು ಬಲಪಡಿಸುತ್ತದೆ. ಇದಲ್ಲದೆ ಮಹಿಳೆಯರಿಗೆ ತಮ್ಮ ಮನೆಯಲ್ಲಿ ಪುರುಷ ಸಂಬಂಧಿಕರ ಸಮ್ಮುಖದಲ್ಲಿ ಪ್ರಶ್ನಿಸುವ ಹಕ್ಕಿದೆ, ಔಪಚಾರಿಕ ಬಂಧನದ ನಂತರವೇ ಪೊಲೀಸ್ ಠಾಣೆಗೆ ಕರೆತರುವ ಹಕ್ಕನ್ನು ಹೊಂದಿದೆ ಮತ್ತು ಇತರ ಮಹಿಳೆಯರಿಂದ ಮಾತ್ರ ಹುಡುಕುವ ಹಕ್ಕನ್ನು ಹೊಂದಿದೆ" ಎಂಬುದನ್ನು ನ್ಯಾಯಾಲಯವು ಒಪ್ಪಿಕೊಂಡಿತು. ಮುಂದಿನ ೧೮ ವರ್ಷಗಳಲ್ಲಿ, ಸತ್ಪತಿ ತಮ್ಮ ವಿರುದ್ಧದ ಎಲ್ಲಾ ಪ್ರಕರಣಗಳನ್ನು ಗೆದ್ದರು. == ಸಾಹಿತ್ಯ ವೃತ್ತಿ == ಸತ್ಪತಿ ಒಡಿಯಾ ಭಾಷೆಯಲ್ಲಿ ಬರಹಗಾರರಾಗಿದ್ದರು. ಅವರ ಕೃತಿಗಳನ್ನು ಹಲವಾರು ಇತರ ಭಾಷೆಗಳಿಗೆ ಅನುವಾದಿಸಲಾಗಿದೆ ಮತ್ತು ಪ್ರಕಟಿಸಲಾಗಿದೆ. ಒರಿಯಾ ಸಾಹಿತ್ಯಕ್ಕೆ ನೀಡಿದ ಕೊಡುಗೆಗಳಿಗಾಗಿ ಅವರು ೧೯೯೮ ರ ಸಾಹಿತ್ಯ ಭಾರತಿ ಸಮ್ಮಾನ್ ಪ್ರಶಸ್ತಿಯನ್ನು ಪಡೆದರು. ತಸ್ಲೀಮಾ ನಸ್ರೀನ್ ಅವರ ಲಜ್ಜಾವನ್ನು ಒರಿಯಾಕ್ಕೆ ಭಾಷಾಂತರಿಸಿರುವುದು ಅವರ ಕೊನೆಯ ಪ್ರಮುಖ ಸಾಹಿತ್ಯ ಕೃತಿಯಾಗಿದೆ. == ಸಾವು == ಅವರು ೪ ಆಗಸ್ಟ್ ೨೦೦೬ ರಂದು ಭುವನೇಶ್ವರದಲ್ಲಿರುವ ತಮ್ಮ ಮನೆಯಲ್ಲಿ ನಿಧನರಾದರು. == ಶ್ರೀಮತಿ ನಂದಿನಿ ಸತ್ಪತಿ ಸ್ಮಾರಕ ಟ್ರಸ್ಟ್ (ಎಸ್.ಎನ್.ಎಸ್.ಎಮ್.ಟಿ) == ೨೦೦೬ ರಲ್ಲಿ ಅವರ ನೆನಪಿಗಾಗಿ ಶ್ರೀಮತಿ ನಂದಿನಿ ಸತ್ಪತಿ ಸ್ಮಾರಕ ಟ್ರಸ್ಟ್ (ಎಸ್.ಎನ್.ಎಸ್.ಎಮ್.ಟಿ) ಎಂಬ ಸಾಮಾಜಿಕ ಕಾರಣದ ಸಂಸ್ಥೆಯನ್ನು ಸ್ಥಾಪಿಸಲಾಯಿತು. ಇದು ಭಾರತದ ಹೊರತಾಗಿಯೂ ಒಡಿಶಾದ ಪ್ರಮುಖ ಸಾಮಾಜಿಕ ಕಾರಣ ಸಂಸ್ಥೆಗಳಲ್ಲಿ ಒಂದಾಗಿದೆ. ಇದರಲ್ಲಿ ಶ್ರೀ. ಸುಪರ್ಣೋ ಸತ್ಪತಿ ಅಧ್ಯಕ್ಷರಾಗಿ ಎಸ್.ಎನ್.ಎಸ್.ಎಮ್.ಟಿ ಮುಖ್ಯಸ್ಥರಾಗಿದ್ದಾರೆ. == ಕುಟುಂಬ == ಇಬ್ಬರು ಪುತ್ರರಲ್ಲಿ ಅವರ ಕಿರಿಯ ಪುತ್ರ ತಥಾಗತ ಸತ್ಪತಿ ಅವರು ಬಿಜು ಜನತಾ ದಳದಿಂದ ೪ ಬಾರಿ ಸಂಸತ್ತಿನ ಸದಸ್ಯರಾಗಿದ್ದರು ಮತ್ತು ಧರಿತ್ರಿ ಮತ್ತು ಒರಿಸ್ಸಾಪೋಸ್ಟ್ ಎಂಬ ದಿನಪತ್ರಿಕೆಗಳ ಸಂಪಾದಕರಾಗಿದ್ದರು. ಅವರ ಹಿರಿಯ ಮೊಮ್ಮಗ ಸುಪರ್ಣೋ ಸತ್ಪತಿ ಅವರು ಪ್ರಸಿದ್ಧ ಸಾಮಾಜಿಕ-ರಾಜಕೀಯ ನಾಯಕರಾಗಿದ್ದಾರೆ. ಇವರು ಎಸ್.ಎನ್.ಎಸ್.ಎಮ್.ಟಿ ಮತ್ತು ಸಿಡೆವೆಂಟ್ ಕನ್ವೀನರ್ ಪಿ.ಎಮ್.ಎಸ್.ಎ-ಒಡಿಶಾದ ಅಧ್ಯಕ್ಷರಾಗಿದ್ದಾರೆ. == ಪರಂಪರೆ == ಜೂನ್ ೯, ದಿವಂಗತ ಶ್ರೀಮತಿಯವರ ಜನ್ಮದಿನ. ನಂದಿನಿ ಸತ್ಪತಿ, ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ - ನಂದಿನಿ ದಿವಸ್ ಎಂದು ಘೋಷಿಸಲಾಗಿದೆ. ನಂದಿನಿ ಮತ್ತು ದಿವಾಸ್ ಎರಡು ಸಂಸ್ಕೃತ ಪದಗಳಾಗಿದ್ದು, ಕ್ರಮವಾಗಿ ಮಗಳು ಮತ್ತು ದಿನ ಎಂದರ್ಥ. ೧ನೇ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು (ನಂದಿನಿ ದಿವಸ್) ೨೦೦೭ ರಲ್ಲಿ ಆಚರಿಸಲಾಯಿತು ಮತ್ತು ಒಡಿಶಾದ ರಾಜ್ಯಪಾಲರು ಈ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದರು. ೭ನೇ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ (ನಂದಿನಿ ದಿವಸ್) ಅನ್ನು ೨೦೧೩ ರಲ್ಲಿ ಆಚರಿಸಲಾಯಿತು ಮತ್ತು ರಾಜಸ್ಥಾನದ ರಾಜ್ಯಪಾಲರು ಈ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದರು. == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಶ್ರೀಮತಿ. ನಂದಿನಿ ಸತ್ಪತಿ ಸ್ಮಾರಕ ಟ್ರಸ್ಟ್ () ಸರ್ಕಾರದ ಪ್ರಕಾರ ಒಡಿಶಾದ ಪ್ರಮುಖ ವ್ಯಕ್ತಿಗಳು ಒಡಿಶಾದ ಅಧಿಕೃತ ವೆಬ್‌ಸೈಟ್